ಕಿಚ್ಚ ಸುದೀಪ್ ಒಂದೇ ಒಂದು ಕರೆಗೆ ಬಿಗ್ ಬಾಸ್ ಮನೆ ರೀ ಓಪನ್, ಡಿಕೆಶಿಗೆ ಧನ್ಯವಾದ ತಿಳಿಸಿದ ಕಿಚ್ಚ
ಬಿಡದಿ ಸಮೀಪದ ಜಾಲಿವುಡ್ ಸ್ಟೂಡಿಯೋದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ಶೂಟಿಂಗ್ಗೆ ಆಕಸ್ಮಿಕವಾಗಿ ಬ್ರೇಕ್ ಬಿದ್ದಿದೆ. ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸರು ಒಟ್ಟಿಗೆ ನಡೆಸಿದ ದಾಳಿಯ ಬಳಿಕ ಸ್ಟೂಡಿಯೋವನ್ನು ಸೀಜ್ ಮಾಡಲಾಗಿದೆ. ಪರಿಸರ ನಿಯಮ ಉಲ್ಲಂಘನೆ – ಅಂದರೆ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಬಿಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರವೇ ಸ್ಟೂಡಿಯೋಗೆ ನೋಟಿಸ್ ನೀಡಿತ್ತು. ಅದರ ಬೆನ್ನಲ್ಲೇ ಮಂಗಳವಾರ ಸಂಜೆ ಜಿಲ್ಲಾಡಳಿತ ದಾಳಿ ನಡೆಸಿ ನಾಲ್ಕು ಗೇಟ್ಗಳಲ್ಲಿ ಮೂನ್ನನ್ನು ಬಂದ್ ಮಾಡಿತು. ಉಳಿದ ಒಂದು ಗೇಟ್ ಮೂಲಕ ಸ್ಪರ್ಧಿಗಳನ್ನು ಸಂಜೆ 7 ಗಂಟೆಯೊಳಗೆ ಹೊರ ಕಳುಹಿಸಲಾಯಿತು. ಅಧಿಕಾರಿಗಳು ಒಳನುಗ್ಗುವಷ್ಟರಲ್ಲಿ ವಾಹಿನಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ತಡೆದರೂ, ನಂತರ ಪೊಲೀಸರು ಬೀಗ ಒಡೆದು ಒಳ ಪ್ರವೇಶಿಸಿದರು.
ಅಷ್ಟರಲ್ಲಾಗಲೇ ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲಾ 17 ಸ್ಪರ್ಧಿಗಳು — ಕಾಕ್ರೋಚ್ ಸುಧಿ, ಕಾವ್ಯ ಶೈವ, ಡಾಗ್ ಸತೀಶ್, ರಾಶಿಕಾ ಶೆಟ್ಟಿ, ಧನುಷ್ ಗೌಡ, ಚಂದ್ರಪ್ರಭ, ಮಂಜುಭಾಷಿಣಿ, ಅಭಿಷೇಕ್ ಶ್ರೀಕಾಂತ್, ಧ್ರುವಂತೆ ಸೇರಿದಂತೆ ಉಳಿದವರು — ಎಲ್ಲರೂ ಮನೆಯಿಂದ ಹೊರ ಬಂದು ವಾಹಿನಿ ವ್ಯವಸ್ಥೆ ಮಾಡಿದ್ದ ಕಾರುಗಳಲ್ಲಿ ಸ್ಟೂಡಿಯೋದಿಂದ ಹೊರಟಿದ್ದಾರೆ.
ದಾಳಿ ನಂತರ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ಸ್ಟೂಡಿಯೋದಲ್ಲೇ ಇರುವ ಥಿಯೇಟರ್ಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಅವರನ್ನು ಬೇರೆ ಖಾಸಗಿ ರೆಸಾರ್ಟ್ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಘಟನೆ ಬಿಗ್ ಬಾಸ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದ ನಡುವೆ ಶೋ ಮುಂದುವರಿಯುತ್ತದೆಯಾ ಅಥವಾ ತಾತ್ಕಾಲಿಕವಾಗಿ ಸ್ಥಗಿತವಾಗುತ್ತದೆಯಾ ಎಂಬುದರ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ.